ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 17 , 2014
|
ಒಕ್ಟೋಬರ್ 17, 2014
|
ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ
ಬೆಳ್ತಂಗಡಿ :
ಮೂರು ಲೋಕಗಳನ್ನು ಕಣ್ಣ ಮುಂದೆ ಮಾತುಗಳಲ್ಲೇ ಸೃಷ್ಟಿಸಬಲ್ಲ ಅನನ್ಯ, ಅದ್ಭುತ ಕರಾವಳಿಯ ಗಂಡು ಕಲೆ ಯಕ್ಷಗಾನ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಭಾನುವಾರ ನಡೆದ ಆದರ್ಶ ಶಿಕ್ಷಕ, ಪ್ರಸಿದ್ಧ ಪಸಂಗಕರ್ತ, ಯಕ್ಷಗಾನ ಅರ್ಥಧಾರಿ, ವಿಮರ್ಶಕ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದಿಂದ ಅವರ 27ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಮಾತನಾಡಿ, ಯಕ್ಷಗಾನ ಕರಾವಳಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಕಲೆ. ಸೀತಾನದಿ ಗಣಪಯ್ಯ ಶೆಟ್ಟರು ಯಕ್ಷರಂಗಕ್ಕೆ ನೀಡಿದ ಕೊಡುಗೆ ದೊಡ್ಡದು. ಅಂತಹ ಮೇರು ವ್ಯಕ್ತಿಯ ಸಂಸ್ಮರಣೆ ಉಜಿರೆಯಲ್ಲಿ ನಡೆಯುತ್ತಿರುವುದು ನಮ್ಮ ಭಾಗ್ಯ ಎಂದರು.
ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕನ್ಯಾಡಿ ಯಕ್ಷ ಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ್, ಪ್ರತಿಷ್ಠಾನ ಸಮಿತಿ ಉಪಾಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಉಪಸ್ಥಿತರಿದ್ದರು. ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸೀತಾನದಿ ಗಣಪಯ್ಯ ಶೆಟ್ಟಿ ಅವರ ಸಂಸ್ಮರಣೆಯನ್ನು ಪೊಲ್ಯ ಉಮೇಶ್ ಶೆಟ್ಟಿ ಮಾಡಿದರು. ಮಣಿಪಾಲ ಎಂಐಟಿ ಉಪನ್ಯಾಸಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನೆ ಭಾಷಣ ಮಾಡಿದರು. ಪ್ರತಿಷ್ಠಾನ ಸಮಿತಿ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನದ ಪಟ್ಟಿಯನ್ನು ಸಮಿತಿಯ ಕೋಶಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ವಾಚಿಸಿದರು.
ಸನ್ಮಾನ ಪತ್ರವನ್ನು ಮಹೇಶ್ ವಾಚಿಸಿದರು. ಪ್ರತಿಷ್ಠಾನದ ಸದಸ್ಯ ರಘುರಾಮ ಶೆಟ್ಟಿ ಸಾಧನಾ ಉಜಿರೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ವಂದಿಸಿದರು. ಉಪನ್ಯಾಸಕ ಡಾ. ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತೆಂಕು-ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ನಡೆಯಿತು.
ಕೃಪೆ :
http://www.vijaykarnataka.com
|
|
|